ಈ ಹಿಂದೆ ನವರಸ ನಾಯಕ ಜಗ್ಗೇಶ್ ಹಾಗೂ ದರ್ಶನ್ ಅಭಿನಯದ ಅಗ್ರಜ ಚಿತ್ರವನ್ನು ನಿರ್ದೇಶಿಸಿದ್ದ ಹೆಚ್.ಎಂ.ಶ್ರೀನಂದನ್ ಅವರೀಗ ತಮ್ಮ ದ್ವಿತೀಯ ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ತಿರುಪತಿ ಎಕ್ಸ್ಪ್ರೆಸ್, ದಿಲ್ವಾಲ ಚಿತ್ರಗಳಲ್ಲಿ ಅಭಿನಯಿಸಿರುವ ನಾಯಕ ನಟ ಸುಮಂತ್ ಶೈಲೇಂದ್ರ ಅವರ ನಾಯಕತ್ವದಲ್ಲಿ ಈ ಚಿತ್ರ ಮೂಡಿಬರಲಿದೆ. ಒಂದು ಅಪರೂಪದ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇದೇ ೨೪ ರ ಭಾನುವಾರದಂದು ಅದ್ಧೂರಿಯಾಗಿ ನೆರವೇರಲಿದೆ. ಈ ಚಿತ್ರಕಥೆಗೆ ಹಾಗೂ ನಾಯಕ ಸುಮಂತ್ ಅವರಿಗೆ ಹೊಂದಿಕೊಳ್ಳುವಂತಹ ಶೀರ್ಷಿಕೆ ಹುಡುಕಾಟದಲ್ಲಿರುವ ನಿರ್ದೇಶಕರು ಮುಹೂರ್ತದ ದಿನದಂದು ಶೀರ್ಷಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಸಧ್ಯಕ್ಕೆ ಪ್ರೊಡಕ್ಷನ್ ನಂ.೧ ಎಂದು ಚಿತ್ರವನ್ನು ಆರಂಭಿಸುತ್ತಿದ್ದಾರೆ. ಈಗಾಗಲೇ ಕೃತಿ ಕರಬಂಧ, ರಾಧಿಕಾ ಪಂಡಿತ್ ರಂಥ ಹೆಸರಾಂತ ನಟೀಮಣಿಯರೊಂದಿಗೆ ಅಭಿನಯಿಸಿರುವ ಸುಮಂತ್ಗೆ ಈ ಚಿತ್ರದಲ್ಲಿ ಜೋಡಿಯಾಗಿ ವಜ್ರಕಾಯದ ನಭಾನಟೇಶ್ ಅವರು ಕಾಣಿಸಿಕೊಳ್ಳಲಿದ್ದಾರೆ.
ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಪಾತ್ರಕ್ಕಾಗಿ ನಾಯಕ ಸುಮಂತ್ ಅವರು ಉಷು (WUSಊU) ಎಂಬ ೭ ಮಾರ್ಷಿಯಲ್ ಆರ್ಟ್ಸ್ ಕಲೆಯನ್ನೊಳಗೊಂಡ ವಿದ್ಯೆಯನ್ನು ಮೂರು ತಿಂಗಳಿಂದ ಕಲಿತು ಸಿದ್ಧರಾಗಿದ್ದಾರೆ. ಈ ಹಿಂದೆ ಸುಮಂತ್ ಅಭಿನಯದ ಎಲ್ಲಾ ಪಾತ್ರಗಳಿಗಿಂತ ಈ ಚಿತ್ರದ ಪಾತ್ರ ಬೇರೆಯದೇ ರೀತಿಯದ್ದಾಗಿದೆ. ಇದಕ್ಕೆ ಸುಮಂತ್ ಕೂಡ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ವಿವಿಧ ಡ್ರೀಮ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.
ಚಿತ್ರಕ್ಕೆ ಎಂ.ಯು.ನಂದಕುಮಾರ್ ಛಾಯಾಗ್ರಹಣ, ಗುರುಕಿರಣ್, ಆನಂದ್ ರಾಜಾವಿಕ್ರಮ್ ಸಂಗೀತ, ಥ್ರಿಲ್ಲರ್ ಮಂಜು ಸಾಹಸ, ಕೆ.ಎಂ.ಪ್ರಕಾಶ್ ಸಂಕಲನ, ಮುರುಳಿ ನೃತ್ಯ ನಿರ್ದೇಶನ, ಪ್ರಭು ಕಲಾನಿರ್ದೇಶನ, ಅಚ್ಯುತ್ರಾವ್ ನಿರ್ಮಾಣ ನಿರ್ವಹಣೆ ಇದ್ದು, ಸುಮಂತ್ ಶೈಲೇಂದ್ರ, ನಭಾನಟೇಶ್, ಅಂಜನ, ರವಿಶಂಕರ್, ಸಾಧುಕೋಕಿಲಾ, ರಂಗಾಯಣರಘು, ಅಚ್ಯುತ್ರಾವ್, ಚಿಕ್ಕಣ್ಣ, ಸುಧಾಬೆಳವಾಡಿ, ಅರುಣಾ ಬಾಲರಾಜ್ ತಾರಾಬಳಗದಲ್ಲಿದ್ದಾರೆ.